ಕನ್ನಡ ವಿವೇಕ

ಬದುಕನ್ನು ಹಸನು ಮಾಡಲು ಕನ್ನಡ ಭಾಷೆ, ಸಂಸ್ಕೃತಿಯು ನಮಗೆ ನೀಡಿದ ಕೆಲವು ಗಾದೆ, ಸೂಕ್ತಿ, ನಾಣ್ಣುಡಿ, ಲೋಕೋಕ್ತಿ, ನಲ್ವಾತು ಇವುಗಳಲ್ಲಿ ವಾರಕ್ಕೆ ಒಂದರ ಕಿರು ಪರಿಚಯವನ್ನು ಈ ಅಂಕಣದಲ್ಲಿ ಮಾಡಿಕೊಡಲಾಗುತ್ತದೆ.

ಕನ್ನಡ ಗಾದೆಮಾತು – ಕೋತಿ ತಾನು ಕೆಡೋದಲ್ದೆ ವನವನ್ನೆಲ್ಲಾ ಕೆಡಿಸ್ತಂತೆ.

ಕನ್ನಡ ಭಾಷೆಯ ಒಂದು ಪ್ರಸಿದ್ಧ ಗಾದೆಮಾತಿದು. ಕೋತಿ ಮನುಷ್ಯನ ಅತಿ ಹತ್ತಿರದ ಜೀವ ವಿಕಾಸದ ಕೊಂಡಿ ಎಂದು ನಾವು ಬಲ್ಲೆವು, ಅಲ್ಲವೇ( ವಾನರನಿಂದ ನರ, ಮಂಗನಿಂದ ಮಾನವ ಎಂಬು ನಾಣ್ಣುಡಿಗಳನ್ನು ಎಲ್ಲ ಕನ್ನಡಿಗರೂ ಕೇಳಿಯೇ ಇರುತ್ತಾರೆ). ಕೋತಿಯು ಬೇರೆ ಪ್ರಾಣಿಗಳಿಗೆ ಹೋಲಿಸಿದರೆ ಬುದ್ಧಿವಂತ ಪ್ರಾಣಿಯಾದರೂ, ಅದು ಬಹು ಚಂಚಲ ಸ್ವಭಾವದ, ತಂಟೆಕೋರ ಪ್ರಾಣಿಯೂ ಹೌದು. ಒಂದು ನಿಮಿಷ ಸುಮ್ಮನಿರದೆ ತಾನಿರುವ ಮರದ ಎಲೆ, ಹಣ್ಣು, ಕಾಯಿ ತರಿಯುವುದು, ಕಾರಣ ಇರಲಿ, ಬಿಡಲಿ ಅತ್ತಿಂದಿತ್ತ, ಇತ್ತಿಂದತ್ತ ಹಾರುವುದು, ಬೇರೆ […]

ಕನ್ನಡ ಗಾದೆಮಾತು – ಸಾಯೋ ತನಕ ಸಾಮು ಮಾಡಿ ಬಾಳೋದ್ಯಾವಾಗ?

ಜಟ್ಟಿಗಳು ಮಲ್ಲಯುದ್ಧದ ಪಟ್ಟುಗಳನ್ನು ಅಭ್ಯಾಸ ಮಾಡುವುದಕ್ಕೆ ಸಾಮು ಮಾಡೋದು ಎನ್ನುತ್ತಾರೆ. ಸಾಮು ಮಾಡೋದು ಎಂಬ ಪದವನ್ನು ನಾವು ಮಾಡುವ ಯಾವುದೇ ವೃತ್ತಿ/ಕೌಶಲ್ಯದ  ಅಭ್ಯಾಸದ ಸಂದರ್ಭದಲ್ಲೂ ಒಂದು ರೂಪಕವಾಗಿ ಬಳಸಬಹುದು. ಜೀವನವಿಡೀ ಯಾವುದೋ ಕಸರತ್ತು‌ ಮಾಡುತ್ತಾ, ಏನಕ್ಕಾಗಿಯೋ ಒದ್ದಾಡುತ್ತಾ, ಇಪ್ಪತ್ನಾಲ್ಕು ಗಂಟೆಯೂ ದುಡಿಯುತ್ತಲೇ ಇದ್ದರೆ ಜೀವನದ ಸಂತೋಷಗಳನ್ನು ಅನುಭವಿಸಲು, ಬದುಕು ಕೊಡುವ ಸವಿಯನ್ನು ಸ್ವೀಕರಿಸಲು ಸಾಧ್ಯ ಆಗುವುದಿಲ್ಲ.‌ ಹಾಗೆಂದೇ  ಈ ಗಾದೆಮಾತು ನಮ್ಮೆಲ್ಲ ಕಸರತ್ತುಗಳಿಗೂ ಒಂದು ಮಿತಿ ಇರಬೇಕು ಎಂಬ ಸಂದೇಶವನ್ನು ಕೊಡುತ್ತಿದೆ. Kannada proverb – Saayo […]

ಕನ್ನಡ ಗಾದೆಮಾತು – ಬೀಸೊ ದೊಣ್ಣೆ ತಪ್ಪಿದ್ರೆ ಸಾವಿರ ವರ್ಷ ಆಯಸ್ಸು. 

ಕನ್ನಡದಲ್ಲಿ ಆಗಾಗ ಬಳಕೆಯಾಗುವ ಗಾದೆ ಮಾತು ಇದು. ‘ಇನ್ನೇನು ನಮ್ಮ ಮೇಲೆ ಬೀಸಲಿರುವ ದೊಣ್ಣೆಯ ಏಟು ತಕ್ಷಣಕ್ಕೆ ತಪ್ಪಲಿ, ಹಾಗೆ ತಪ್ಪಿದರೆ ಸಾವಿರ ವರ್ಷ ಆಯಸ್ಸು ಸಿಕ್ಕಿದಂತೆ ಆಗುತ್ತೆ, ಮುಂದೆ ನೋಡಿಕೊಳ್ಳೋಣ’ ಎಂಬ ಚಿಂತನೆ ಈ ಗಾದೆಮಾತಿನ ಹಿನ್ನೆಲೆಯಲ್ಲಿದೆ. ನಿಜ ಜೀವನದಲ್ಲಿ ಬರುವ ಅನೇಕ ತ್ರಾಸದಾಯಕ ಸಂದರ್ಭಗಳು ಈ‌ ಜಾಣ್ಣುಡಿಯನ್ನು ನೆನಪಿಸಿಕೊಳ್ಳುವಂತೆ ಮಾಡುತ್ತವೆ. ಉದಾಹರಣೆಗೆ,  ನ್ಯಾಯಾಲಯದ ಪ್ರಕರಣಗಳಲ್ಲಿ ತಡೆಯಾಜ್ಞೆ ಸಿಕ್ಕಿದರೆ, ತುಂಬ ಕಷ್ಟವಾದ ವಿಷಯಗಳ ಪರೀಕ್ಷೆಗಳು ಮುಂದೂಲ್ಪಟ್ಟರೆ, ಉದ್ಯೋಗಿಗಳಿಗೆ ಕೆಲಸದ ಸ್ಥಳದಿಂದ ಆಗುವಂತಹ, ಇಷ್ಟವಿಲ್ಲದ  ವರ್ಗಾವಣೆ ಯಾವುದೋ […]

ಕನ್ನಡ ಗಾದೆಮಾತು – ಮರಣಕ್ಕೆ ಮದ್ದಿಲ್ಲ.

ನೋಡಿ, ನಮ್ಮ ನುಡಿಯಲ್ಲಿರುವ ಈ ಗಾದೆಮಾತು ಎರಡೇ ಪದಗಳಲ್ಲಿ ಜೀವನದ  ಗಾಢಸತ್ಯವೊಂದನ್ನು ಹೇಳ್ತಿದೆ. ಹುಟ್ಟಿದವರಿಗೆ ಮರಣವು ಅನಿವಾರ್ಯ ಎಂಬುದು ಎಲ್ಲರಿಗೂ ಗೊತ್ತಿದ್ದರೂ, ತಾವು ಎಂದೂ ಸಾಯುವುದಿಲ್ಲ ಎಂಬಂತೆಯೇ ಜನರ ವರ್ತನೆ ಇರುತ್ತದೆ. ಮರಣವನ್ನು ಮುಂದೂಡಲು ಜನರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಾರೆ, ಅಷ್ಟೇ ಅಲ್ಲ ಚಿರಂಜೀವಿಯಾಗುವ ಆಸೆಯಿಂದ ಜನರು ಏನೆಲ್ಲ ಕಸರತ್ತುಗಳನ್ನು ಮಾಡುತ್ತಾರೆ ಎಂಬುದನ್ನು ನಾವು ಅನೇಕ ಸಲ ಗಮನಿಸುತ್ತೇವೆ ಅಲ್ಲವೇ? ನಮ್ಮ ಪುರಾಣಗಳಲ್ಲಿ ಮಹತ್ವಾಕಾಂಕ್ಷಿ ರಾಕ್ಷಸರು ತಮಗೆ ಮರಣವೇ ಬರಬಾರದು ಎಂಬ ವರ ಪಡೆಯಲಿಕ್ಕಾಗಿ, ವರ್ಷಗಟ್ಟಲೆ ತಪಸ್ಸು […]

ಕನ್ನಡ ಗಾದೆಮಾತು – ಹೊಳೆಯಲ್ಲಿ ಹುಣಿಸೆ ಹಣ್ಣು ಕಿವುಚಿದ್ಹಂಗೆ. 

ಕನ್ನಡ ಭಾಷೆಯಲ್ಲಿ ಬಹುವಾಗಿ ಬಳಕೆಯಾಗುವ ಗಾದೆಮಾತುಗಳಲ್ಲಿ ಇದೂ ಒಂದು. ನಾವು ಮನೆಯಲ್ಲಿ ಹುಣಿಸೆ ಹಣ್ಣನ್ನು ಸಾರು, ಸಾಂಬಾರು, ಗೊಜ್ಜು, ಪುಳಿಯೋಗರೆ ಮುಂತಾದವನ್ನು ಮಾಡಲು ಬಳಸುವಾಗ, ನಮಗೆ ಎಷ್ಟು ಬೇಕೋ ಅಷ್ಟನ್ನು ನೀರಿನಲ್ಲಿ ಕಿವುಚಿಕೊಂಡು ರಸ ತೆಗೆದು ಬಳಸುತ್ತೇವಲ್ಲ,  ಇದು ನಮ್ಮ ದಿನದ ರೂಢಿಯ ಮಾತಾಯಿತು. ಆದರೆ ಇಷ್ಟೇ ಪ್ರಮಾಣದ ಹುಣಿಸೆ ಹಣ್ಣನ್ನು ಒಂದು ಹೊಳೆ ಅಥವಾ ನದಿಯಲ್ಲಿ ಕಿವುಚಿದರೆ ಏನಾಗಬಹುದು!? ಆ ಹಣ್ಣು ವ್ಯರ್ಥವಾಗಿ ಹೋಗುತ್ತದೆಯೇ ಹೊರತು ನಮಗೆ ಅದರ ಹುಳಿರುಚಿ‌ ಸ್ವಲ್ಪವೂ ದೊರೆಯುವುದಿಲ್ಲ.    ಹೀಗೆಯೇ […]

ಕನ್ನಡ ಗಾದೆಮಾತು – ಹಲಸಿನ ಹಣ್ಣು ಬೇಕು, ಅಂಟು‌ ಬ್ಯಾಡ ಅಂದಂಗೆ.  

ಜೀವನ ವಿವೇಕದ ಮಾತೊಂದನ್ನು ತುಂಬ ಅರ್ಥ ಪೂರ್ಣವಾಗಿ ಹೇಳುವಂತಹ ಗಾದೆಮಾತು ಇದು. ನಮಗೆ ಹಲಸಿನ ಹಣ್ಣನ್ನು ತಿನ್ನುವ ಆಸೆ ಇದ್ದು ಅದನ್ನು ಬೇರೆಯವರಿಂದ ಕೇಳಿ ಪಡೆದೋ ಅಥವಾ ಹಣ ಕೊಟ್ಟು  ಕೊಂಡೋ ಮನೆಗೆ ತರುತ್ತೇವೆ ಎಂದಿಟ್ಟುಕೊಳ್ಳಿ. ಅದನ್ನು ಹೆಚ್ಚುವಾಗ ಅದರೊಳಗಿನ ಮೇಣವು ಚಾಕುವಿಗೆ, ಕೈಗೆ ಅಂಟಿಕೊಳ್ಳುತ್ತದೆ. ನಾವು ಹಲಸಿನ ತೊಳೆಯನ್ನು ತಿನ್ನಬೇಕು ಅಂದರೆ ಈ ಮಿಜಿಮಿಜಿಮಿಜಿ ಎನ್ನುತ್ತಾ ಕೈಗೆಲ್ಲಾ ಅಂಟಿಕೊಳ್ಳುವ ಮೇಣದ ಜೊತೆ ಗುದ್ದಾಡಲೇಬೇಕು.‌ ಹಲಸಿನ ಹಣ್ಣು ಮಾತ್ರ ಬೇಕು, ಮೇಣ ಬೇಡ ಅಂದರೆ ಆಗುವುದಿಲ್ಲ. ಹಾಗೆಯೇ […]

ಕನ್ನಡ ಗಾದೆಮಾತು – ಉಪ್ಪು ಸಿಕ್ರೆ ತುಪ್ಪದ ಚಿಂತೆ, ತುಪ್ಪ‌ ಸಿಕ್ರೆ ಕೊಪ್ಪರಿಗೆ ಚಿಂತೆ.

ಮನುಷ್ಯನ ಆಸೆಗೆ ಮಿತಿ ಇಲ್ಲ. ಉಪ್ಪು ಸಿಗುವವರೆಗೂ ಅದರ ಚಿಂತೆ ಮಾಡುವ ಮನುಷ್ಯ ಅದು ಸಿಕ್ಕಿದ ತಕ್ಷಣ ತುಪ್ಪದ ಚಿಂತೆ ಮಾಡುತ್ತಾನೆ. ಇನ್ನು ತುಪ್ಪ ಸಿಕ್ಕಿದರೆ ಅವನಿಗೆ ತೃಪ್ತಿ ಆಗುತ್ತದೆಯೇ? ಇಲ್ಲ.‌ ಮುಂದೆ ಅವನಿಗೆ ಕೊಪ್ಪರಿಗೆ ಹೊನ್ನಿನ ಚಿಂತೆ ಶುರುವಾಗುತ್ತದೆ! ಒಟ್ಟಿನಲ್ಲಿ ಎಷ್ಟಿದ್ದರೂ ಇನ್ನಷ್ಟಕ್ಕೆ ಆಸೆ ಪಡುವುದೇ ಮನುಷ್ಯನ ಸ್ವಭಾವ.‌ ಪುರಂದರದಾಸರು ಸಹ ‘ಇಷ್ಟು ದೊರಕಿದರೆ ಅಷ್ಟು ಬೇಕೆಂಬಾಸೆ, ಅಷ್ಟು ದೊರಕಿದರೆ ಮತ್ತಿಷ್ಟರಾಸೆ’ ಎಂದು ಮನುಷ್ಯನ ಈ ಸ್ವಭಾವವನ್ನು ಬಯಲಿಗೆಳೆದಿದ್ದಾರೆ.‌ ಈ ಗಾದೆಮಾತನ್ನು ಅರ್ಥ ಮಾಡಿಕೊಂಡರೆ ಬಹುಶಃ […]

ಕನ್ನಡ ಗಾದೆ ಮಾತು – ಚಿನ್ನದ ಸೂಜಿ ಅಂತ ಕಣ್ಣು ಚುಚ್ಕೊಳೋಕ್ಕಾಗುತ್ತಾ?

ಕನ್ನಡ ಜನರು ಬಳಸುವ ಒಂದು ಅನುಭವಜನ್ಯ ಮಾತು ಇದು. ಸೂಜಿಯನ್ನು ಚಿನ್ನದಿಂದ ಮಾಡಿದ್ದಾರೆ ಎಂದು ಕಣ್ಣಿಗೆ ಚುಚ್ಚಿಕೊಂಡರೆ ಅದು ಚುಚ್ಚದೆ ಇರುವುದಿಲ್ಲ, ಅಲ್ಲವೇ? ಹಾಗೆಯೇ ನಮ್ಮವರು ಎಂದು ನಾವು ಭಾವಿಸುವವರು ಕೆಟ್ಟದ್ದನ್ನು ಮಾಡಿದರೆ ಅದು ಕೆಟ್ಟ ಕೆಲಸವೇ ತಾನೇ.‌ ನಮ್ಮ ಮಕ್ಕಳು/ನೆಂಟರು/ಸ್ನೇಹಿತರು ತಪ್ಪು ಕೆಲಸ ಮಾಡಿದಾಗ ಅದನ್ನು ಒಪ್ಪಿಟ್ಟುಕೊಳ್ಳಲು ಸಾಧ್ಯ ಇಲ್ಲ.‌ ಇಂತಹ ವಿಷಾದಕರ ಸಂದರ್ಭಗಳಲ್ಲಿ ಮೇಲ್ಕಂಡ ಗಾದೆಮಾತನ್ನು ಬಳಸಲಾಗುತ್ತದೆ.  Kannada proverb – Chinnada sooji antha kannu chuchkolloke aaguththa? ( Just because […]

ಕನ್ನಡ ಗಾದೆಮಾತು – ಅನ್ನ ಹಾಕಿದ ಮನೆಗೆ ಕನ್ನ ಹಾಕಬೇಡ.

ಕೇಳಲು ಆಕರ್ಷಕ ಎನಿಸುವಂತೆ ಪ್ರಾಸಬದ್ಧವಾಗಿರುವ ಮೇಲಿನ ಗಾದೆಮಾತು ಬಹು ಮುಖ್ಯವಾದ ಒಂದು ಜೀವನಮೌಲ್ಯವನ್ನು ಕಲಿಸುತ್ತದೆ. ನಮಗೆ ಅನ್ನ ಹಾಕಿದ ಮನೆ – ಅದು ನಮ್ಮ ಅಪ್ಪ-ಅಮ್ಮನ ಮನೆ, ನೆಂಟರ ಮನೆ, ಸ್ನೇಹಿತರ ಮನೆ, ಹಳೆಯ ಕಾಲದಲ್ಲಿ ವಿದ್ಯಾರ್ಥಿಗಳಿಗೆ ವಾರಾನ್ನ ಹಾಕುತ್ತಿದ್ದ ಮನೆ ಯಾವುದಾದರೂ ಆಗಬಹುದು ……. ಒಟ್ಟಿನಲ್ಲಿ ಯಾವ ಮನೆ ನಮ್ಮನ್ನು ಪೋಷಿಸಿರುತ್ತದೋ, ಅಲ್ಲಿ ನಾವು ಕಳ್ಳತನ ಮಾಡಬಾರದು, ಆ ಮನೆಗೆ ತೊಂದರೆ ಆಗುವಂಥದ್ದೇನನ್ನೂ ಮಾಡಬಾರದು ಎಂಬುದು ಈ ಗಾದೆಮಾತಿನ ಅರ್ಥ. ‌ಎಷ್ಟು ಉತ್ತಮ‌ ಮೌಲ್ಯ ಅಲ್ಲವೇ ಇದು! […]

ಕನ್ನಡ ಗಾದೆಮಾತು –  ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ.

ಒಂದು ಗಂಭೀರವಾದ ಜೀವನವಿವೇಕವನ್ನು ತುಂಬ ಚಿತ್ರಕವಾಗಿ, ಕಣ್ಣಿಗೆ ಕಟ್ಟಿದಂತೆ ಹೇಳುವ ಕನ್ನಡ ಗಾದೆ ಮಾತಿದು.‌ ಅಡಿಕೆಯಂತಹ ಪುಟಾಣಿ ವಸ್ತುವನ್ನು ಕದ್ದರೂ, ಆನೆಯಂತಹ ಬಹು ದೊಡ್ಡಗಾತ್ರದ ವಸ್ತುವನ್ನು ಕದ್ದರೂ ಕಳ್ಳತನ ಕಳ್ಳತನವೇ ತಾನೇ. ಹಾಗೆಯೇ ತಾನು ಸಂಬಳ ತೆಗೆದುಕೊಂಡು ಮಾಡುತ್ತಿರುವಂತಹ ಉದ್ಯೋಗದ ವಿಷಯ ಬಂದಾಗ, ತನ್ನ ಕರ್ತವ್ಯ ತಾನು‌ ಮಾಡುವುದಕ್ಕೆ ಒಂದು ರೂಪಾಯಿ ‌ಲಂಚ ತೆಗೆದುಕೊಂಡರೂ ಭ್ರಷ್ಟಾಚಾರವೇ, ಒಂದು ಲಕ್ಷ ರೂಪಾಯಿ ತೆಗೆದುಕೊಂಡರೂ  ಭ್ರಷ್ಟಾಚಾರವೇ. ಒಟ್ಟಿನಲ್ಲಿ ಈ‌ ಗಾದೆಮಾತು ಕಲಿಸುವ ಪಾಠವೇನೆಂದರೆ‌ ಮನುಷ್ಯನು ಕೆಟ್ಟದ್ದರಿಂದ ಸಂಪೂರ್ಣವಾಗಿ ದೂರವಿರಬೇಕು. ‘ಸ್ವಲ್ಪ  ಕೆಟ್ಟದ್ದು,  […]

Page 10 of 20

Kannada Sethu. All rights reserved.